
ವ್ಯಕ್ತಿಚಿತ್ರಣದಲ್ಲಿ ಚಿತ್ರಿತರಾಗಿರುವ ಜೀವಿಯೊಬ್ಬರು ತಾವೇ ಹಿನ್ನೆಲೆಯಲ್ಲಿ ಆಸೀನರಾಗಿ ಆತ್ಮಗಾಥೆಯನ್ನು ಉಸುರಿದಂತೆ ಮೂಡಿಬಂದಿರುವ 'ತಣ್ಣೆಳಲ ಹಾದಿಯಲ್ಲಿ' ಕೃತಿ ತನ್ನದೇ ಆದ ವಿಭಿನ್ನತೆಯ ಅಕ್ಷರ ನಮನವಾಗಿದೆ. ಈ ಕೃತಿಯಲ್ಲಿ ಲೇಖಕಿ ಸರೋಜಿನಿಯವರ ಅಜ್ಜಿ 'ಏಕಾ' ಅರ್ಥಾತ್ ಸೋನಕ್ಕ ಇಲ್ಲಿ ಲಾರ್ಜರ್ ದ್ಯಾನ್ ಲೈಫ್ ರೂಪಿಣಿಯಾಗಿದ್ದಾರೆ. ತಾನು ಕರ್ಪೂರದಂತೆ ಉರಿದರೂ ಕುಟುಂಬಕ್ಕೆ ತಣ್ಣೆಳಲು ಬಿತ್ತರಿಸಿದ ಸೋನಕ್ಕನ ಜೀವನ ಪಯಣದ ಸೊಗಡಿದು. ಹತ್ತೊಂಬತ್ತನೆಯ ಶತಮಾನದಲ್ಲಿದ್ದು, ಈಗ ಇಲ್ಲವಾಗಿರುವ- ಪತಿವಿಹೀನ ಮಹಿಳೆ ಕೂದಲು ವಿಸರ್ಜಿಸಿ ಮಡಿಯಾಗುವಂಥ ವಿಕ್ಷಿಪ್ತ ಆಚರಣೆಗೆ ಏಕಾ ತಾವಾಗಿಯೇ ಮನಸ್ಸು ಮಾಡುವ ಅನಿವಾರ್ಯತೆ ಮನಮಿಡಿಯುತ್ತದೆ. ಕಥನದಲ್ಲಿ ಮುತಾಲಿಕ್ ಮನೆತನದ ಇತಿವೃತ್ತಗಳು ಈ ಕುಟುಂಬದ ಜೊತೆಯಲ್ಲೇ ಒಂದು ಭಾವನಾತ್ಮಕ ಎಲೆಯನ್ನು ಓದುಗರೊಂದಿಗೂ ಜೋಡಿಸಿಕೊಂಡ ಅನುಭವ ಕೊಟ್ಟಾವು. "ಅಣ್ಣಾ ಸ್ವಾಭಿಮಾನಿ, ಶಿಸ್ತಿನ ಸಿಪಾಯಿ, ಸುಳ್ಳು ತಟವಟಗಳ ನೆರಳಿಗೂ ಹಾಯದವರು, ಒಳಗೊಂದು ಹೊರಗೊಂದು ಮಾತಂತೂ ಅವರ ಜನ್ಮಕ್ಕ ಗೊತ್ತಿದ್ದಿಲ್ಲ. ಅವರ ನಡೆನುಡಿ ಎಷ್ಟು ಕ್ರಮಬದ್ಧ ಶಿಸ್ತಿನದೋ ಅಷ್ಟೇ ಅಣ್ಣಾ ಮಮತಾಮಯಿ'' ಎಂದು ಅಭಿಮಾನ ಪಡುತ್ತಾರೆ ಲೇಖಕಿ, "ಇದ್ದದ್ರಾಗ ತೃಪ್ತ ಇರೂ ಸಾದಾ ಜೀವನದಾಹಿ ನಮ್ಮ ಅವ್ವಾ, ನವ್ವಾಲಿ ಸೀರಿ ಶಿಸ್ತಾಗಿ ಕಚ್ಚಿ ಹಾಕಿ ಉಟ್ಟು ಇಷ್ಟುದ್ದ ಕೂದಲಾ ಸಾಪಾಗಿ ಹಿಕ್ಕಿ ಹರಳ ಹಾಕ್ಕೊಂಡು ಅಗದೀ ಶಿಸ್ತ ಇರಾಕಿ... " ಈ ಸಾಲುಗಳಂತೂ ನನಗೆ ನನ್ನದೇ ತಾಯಿಯ ನೆನಪನ್ನು ತಂದಿದ್ದರಲ್ಲಿ ಆಶ್ಚರ್ಯವಿಲ್ಲ. 'ತಣ್ಣೆಳಲ ಹಾದಿಯಲ್ಲಿ' ಓದುಗರಲ್ಲಿ ಗತಕಾಲದ ಒಂದು ಶಕ್ತ ಅನುಭವವನ್ನು ಸೃಷ್ಟಿಸುತ್ತದೆ. ಓದುಗನಿಗೆ ದೊರೆಯುವ ತೃಪ್ತಿಯೇ ಆ ಕೃತಿಯ ಸಾರ್ಥಕತೆ ಎನ್ನುವುದಾದರೆ, ಈ ಕೃತಿಯಲ್ಲಿ ಆ ಸಿದ್ಧಿಯಾಗಿದೆ ಎಂದು ಹೇಳಲೇಬೇಕು. - ಜಯಶ್ರೀ ದೇಶಪಾಂಡೆ